SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಗಣಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು - ಕೆ.ಜಿ.ಎಫ್.ನಲ್ಲಿನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್

7/8/2017

0 Comments

 
Picture
ಪರಿಚಯ
ಗಣಿ ಕಾರ್ಮಿಕರು ಈ ದೇಶದ ಅಭಿವೃದ್ಧಿಗಾಗಿ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಅವಲಂಬಿತರ ಪೋಷಣೆಗಾಗಿ ಅವರ ದೈನಂದಿನ ಬದುಕನ್ನು ಸುತ್ತಲಿನ ಸಮುದಾಯಗಳೊಂದಿಗೆ ಸಮೀಕರಿಸಿಕೊಂಡು, ಈ ದೇಶದ ಒಂದು ಭಾಗವಾಗಿ ಜೀವಿಸುತ್ತಿದ್ದಾರೆ. ಇಂದಿನ ವೈಜ್ಞಾನಿಕತೆ, ತಂತ್ರಜ್ಞಾನ ಮತ್ತು ಆಧುನಿಕತೆಗಳಿಗೆ ಹೊಂದಿಕೊಳ್ಳಲಾಗದೆ ಹಾಗೂ ಜೀವನವನ್ನು ಬಿಟ್ಟುಕೊಡಲಾಗದಂತಹ ಪರಿಸ್ಥಿತಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗಣಿ ಕಾರ್ಮಿಕರ ಬೌದ್ಧಿಕ ಚಿಂತನೆ, ಆಲೋಚನೆ ಹಾಗೂ ಆಕಾಂಕ್ಷೆಗಳೆಲ್ಲವು ತಮ್ಮ ಸುತ್ತಲಿನ ಪರಿಸರದೊಂದಿಗೆ ಕೇಂದ್ರೀಕೃತಗೊಂಡು, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ವಿಸ್ತ್ರೃತಗೊಂಡಂತೆಲ್ಲಾ ಗಣಿ ಕಾರ್ಮಿಕರ ಬೌದ್ಧಿಕತೆಯು ಸಂಕೀರ್ಣಗೊಳ್ಳುತ್ತಾ ತನ್ನ ಸುತ್ತಲಿನ ಸಮುದಾಯಗಳನ್ನು ಪ್ರಶ್ನಿಸುವ, ಪರೀಕ್ಷಿಸುವ ಹೊಸ ಹೊಸ ನಿರೀಕ್ಷೆಗಳನ್ನು ಅದರ ಮೇಲೆ ಪ್ರಯೋಗಿಸುವ, ಪ್ರಯೋಗ ಶಾಲೆಯನ್ನಾಗಿ ಸಮಾಜವನ್ನು ರೂಪಿಸಿಕೊಂಡವರು. ಆಧುನಿಕತೆ, ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ತನ್ನ ಮಹಾತ್ವಾಕಾಂಕ್ಷೆಗಳ ವಿಶ್ಲೇಷಣೆಗೆ ಮುಂದಾದಾಗ ಗಣಿ ಕಾರ್ಮಿಕರು ತಮ್ಮ ಮೂಲವೃತ್ತಿ ಹಾಗೂ ಮೂಲ ನೆಲೆಯು ಸ್ಥಿತ್ಯಂತರಕ್ಕೆ ಒಳಗಾಗಿ ಅನೇಕ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯು ಸಹ ದೇಶದಲ್ಲಿನ ಅನೇಕ ಗಣಿಗಳು ಮುಚ್ಚಿದ್ದು ಅಂತಹ ಗಣಿ ಕಾರ್ಮಿಕರು ಗಣಿ ಕೈಗಾರಿಕೆಯನ್ನೇ ತಮ್ಮ ಜೀವನಾಧಾರವಾಗಿ ನಂಬಿಕೊಂಡು ಜೀವನ ಮಾಡುತ್ತಿದ್ದ ಅನೇಕ ಗಣಿ ಕಾರ್ಮಿಕರು ಇಂದು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿರುವವರು ಈ ದೇಶದಾದ್ಯಂತ ಕಾಣಸಿಗುತ್ತಾರೆ. 
ಗಣಿಗಾರಿಕೆ ಎಂದರೇನು?
ಗಣಿಗಳ ಕಾಯ್ದೆ-1957 ರ ಕಲಂ 2 (1) (ಜೆ) ಪ್ರಕಾರ ಖನಿಜಗಳನ್ನು ದೊರಕಿಸಿಕೊಳ್ಳಲು ನಡೆಸುವ ಭೂ ಶೋಧನೆ ಹಾಗೂ ಖನಿಜ ಮತ್ತು ಲೋಹಗಳ ಸಂಪನ್ಮೂಲಗಳ ಪ್ರಾಪ್ತಿಗಾಗಿ ನಡೆಯುತ್ತಿರುವ ಭೂಮಿಯ ಅಗೆತದ ಕೆಲಸ ಹಾಗೂ ಗಣಿಯ (ಭೂಮಿಯ) ಸುರಂಗ ಮಾಡುವ ಕಾರ್ಯಕ್ಕೆ ಗಣಿಗಾರಿಕೆ ಎನ್ನುವರು. ಅಂದರೆ

  • ಸಮತಲ ಪ್ರದೇಶಗಳನ್ನು ಮಾಡುವುದು,
  • ಯಂತ್ರ ಸ್ಥಾವರಗಳನ್ನು ಸ್ಥಾಪಿಸುವುದು,
  • ಟ್ರಾಮ್ವೇ, ಕಟ್ಟಡಗಳನ್ನು ನಿರ್ಮಿಸುವುದು,
  • ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸುವುದು,
  • ರೈಲ್ವೆ ಕೇಂದ್ರಗಳನ್ನು ಸ್ಥಾಪಿಸಲು ಅನುವು ಮಾಡಿಕೊಳ್ಳುವುದು,
ಇತ್ಯಾದಿಗಳೆಲ್ಲದಕ್ಕೆ ಅನುಕೂಲ ಮಾಡಿಕೊಡುವ ವ್ಯವಸ್ಥೆ, ಮಾರಾಟ, ಗಣಿ ಉದ್ಯಮಕ್ಕಾಗಿ ಬಳಸಿಕೊಳ್ಳುವ ನೇರ ಪ್ರದೇಶ, ಇತ್ಯಾದಿ ಎಲ್ಲಾ ಚಟುವಟಿಕೆಗಳು ಸೇರಿವೆ.1
 
ಕಾರ್ಮಿಕನೆಂದರೆ ಯಾರು?
ಕಾರ್ಮಿಕನೆಂದಾಕ್ಷಣ ನಮ್ಮ ಮುಂದೆ ಹಲವಾರು ಪ್ರಶ್ನೆಗಳು ತಲೆ ಎತ್ತುತ್ತವೆ. ಅವುಗಳಲ್ಲಿ ಯಾವ ಕಾರ್ಮಿಕ?, ಯಾವ ಕಾರ್ಮಿಕ ವಲಯ?, ಯಾವ ಸಮುದಾಯದ ಕಾರ್ಮಿಕ? ಕೈಗಾರಿಕೆಗಳು ಸ್ತಬ್ಧಗೊಂಡ ಅಥವಾ ಮುಚ್ಚಿದ ನಂತರ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಕಾರ್ಮಿಕನೆಂದು ಕರೆಯಬಹುದೇ? ಎಂಬ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಬೇಕಾಗುತ್ತದೆ. ಏಕೆಂದರೆ ತಂತ್ರಜ್ಞಾನವು ಕಾರ್ಮಿಕವರ್ಗವನ್ನು ಕೌಶಲ್ಯ ಕಾರ್ಮಿಕರು (Skilled Labour), ಅರೆಕುಶಲ ಕಾರ್ಮಿಕರು (Semi-Skilled Labour) ಮತ್ತು ಕೌಶಲ್ಯರಹಿತ ಕಾರ್ಮಿಕರು (Un-skilled Labour) ಎಂದು ಮೂರು ಭಾಗಗಳಾಗಿ ವರ್ಗೀಕರಿಸಿದೆ. ಹಾಗಾಗಿ ಯಾವ ವರ್ಗದ ಕಾರ್ಮಿಕರನ್ನು ಆಯ್ಕೆಗೆ ಪರಿಗಣಿಸಬೇಕೆಂಬ ಗೊಂದಲ ಸೃಷ್ಟಿಯಾಗುತ್ತದೆ. ಒಂದು ವೇಳೆ ಉತ್ಪಾದನಾ ವಲಯವನ್ನು ಪರಿಗಣಿಸುವುದಾದರೆ ಕೈಗಾರಿಕೆಯಲ್ಲಿನ ಕಾರ್ಮಿಕ ಅಥವಾ ಕೃಷಿ ಕಾರ್ಮಿಕ ಎಂಬುದನ್ನು ಕಂಡುಹಿಡಿಯ ಬೇಕಾಗುತ್ತದೆ. ಹಾಗೆಯೇ ಸಂಘಟಿತ ಕಾರ್ಮಿಕ, ಅಸಂಘಟಿತ ಕಾರ್ಮಿಕ, ಅಲೆಮಾರಿ ಕಾರ್ಮಿಕ ಹಾಗೂ ಕೈಗಾರಿಕೆಗಳು ಸ್ತಬ್ಧಗೊಂಡ ಅಥವಾ ಮುಚ್ಚಿದ ನಂತರ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರೆಂಬ ಅನೇಕ ಪ್ರಭೇದಗಳು ಹತ್ತಾರು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಕಾರ್ಮಿಕನೆಂದರೆ ಕೆಲಸಗಾರ ಅಥವಾ ಶ್ರಮಜೀವಿ ಅಥವಾ ಕೂಲಿಕಾರ ಅಥವಾ ದುಡಿಯುವವ ಎಂದೂ ಅರ್ಥವಾಗುತ್ತದೆ. ಇಂತಹ ಕಾರ್ಮಿಕ ಪದಕ್ಕೆ ಹಲವಾರು ವ್ಯಾಖ್ಯಾನಗಳಿದ್ದು ಅವುಗಳಲ್ಲಿ-

ಕಾರ್ಖಾನೆಗಳ ಕಾಯಿದೆ (1948) ಅನುಚ್ಛೇದ 2 (ಐ)2 ಪ್ರಕಾರ ಕಾರ್ಮಿಕನೆಂದರೆ ಒಬ್ಬ ವ್ಯಕ್ತಿ ನೇರವಾಗಿ ಅಥವಾ ಸಂಸ್ಥೆಯ ಮುಖಾಂತರ (ಗುತ್ತಿಗೆದಾರನನ್ನು ಒಳಗೊಂಡಂತೆ) ಮಾಲೀಕನ ಒಪ್ಪಿಗೆ ಅಥವಾ ಒಪ್ಪಿಗೆಯಿಲ್ಲದೆ ವೇತನಕ್ಕಾಗಿ ಅಥವಾ ಇಲ್ಲದೇ ಕೆಲಸ ಮಾಡುವ ಪ್ರಕ್ರಿಯೆ ಅಥವಾ ಯಂತ್ರಗಳ ಯಾವುದೇ ಭಾಗವನ್ನು ಸ್ವಚ್ಛಗೊಳಿಸುವ ಅಥವಾ ಕೆಲಸ ಮಾಡಲು ಕೈಗಾರಿಕಾ ಪ್ರದೇಶವನ್ನು ಬಳಸಿಕೊಳ್ಳುವ ಪ್ರಕ್ರಿಯೆ ಅಥವಾ ಕೆಲಸ ಮಾಡುವ ಯಾವುದೇ ಭಾಗ ಅಥವಾ ವಿಷಯದ ಪ್ರಕ್ರಿಯೆಗೆ ತೊಡಗಿಸಿಕೊಂಡವರನ್ನು ಕಾರ್ಮಿಕನೆನ್ನುತ್ತಾರೆ.

ಎ.ಮಾರ್ಷಲ್. (1961)3 ಯಾವುದೇ ಒಬ್ಬ ವ್ಯಕ್ತಿಯು ದೈಹಿಕ ಇಲ್ಲವೇ ಬೌದ್ಧಿಕವಾಗಿ ಯಾವುದಾದರೂ ಒಂದು ನಿರ್ದಿಷ್ಟವಾದ ಕೆಲಸದಲ್ಲಿ ಭಾಗಶಃ ಇಲ್ಲವೇ ಸಂಪೂರ್ಣವಾಗಿ ಸರಳ ಅಥವಾ ಶ್ರಮದಾಯಕ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಾರ್ಮಿಕನೆಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

ಮಾಕ್ರ್ಸ ಮತ್ತು ಎಂಜೆಲ್. (1970)4 ಬಂಡವಾಳಶಾಹಿಗಳ ಇಲ್ಲವೇ ಬೂರ್ಜ್ವಾಗಳ ಇಚ್ಚಾಶಕ್ತಿಗನುಗುಣವಾಗಿ ಯಾವೊಬ್ಬ ಕೆಲಸಗಾರನು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಯಾವುದೇ ಸ್ವರೂಪದ ಭೌತಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುವವನನ್ನು ಕಾರ್ಮಿಕನೆಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

ಕೆ.ಪಿ.ಎಂ.ಸುಂದರಮ್ ಮತ್ತು ರುದ್ರ್ ದತ್. (1985)5 ವಿವಿಧ ಬಗೆಯ ಕೈಗಾರಿಕೆಗಳಾದ ಬೃಹತ್ ಕೈಗಾರಿಕೆ, ಮಧ್ಯಮ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆಗಳಲ್ಲಿ ಯಾವುದೇ ಸ್ವರೂಪದ ವೇತನಕ್ಕಾಗಿ ದುಡಿಯುವ ಕೆಲಸಗಾರರನ್ನು ಕೈಗಾರಿಕಾ ಕಾರ್ಮಿಕರೆಂದು ಕರೆಯುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ಸುತ್ತಲು ಕಂಡುಬರುವ ವಿವಿಧ ವಸ್ತುಗಳ ಉತ್ಪಾದನಾ ಚಟುವಟಿಕೆಯಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸಿ, ಅವುಗಳನ್ನು ಸಿದ್ಧವಸ್ತುವನ್ನಾಗಿ ಪರಿವರ್ತಿಸುವುದರ ಜೊತೆಗೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರೇರಕರಾದ ದೈಹಿಕ ಅಥವಾ ಬೌದ್ಧಿಕ ಕೆಲಸಗಾರರನ್ನು ಕಾರ್ಮಿಕನೆಂದು ಕರೆಯಬಹುದು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕ ಅಥವಾ ಕೆಲಸಗಾರ ಎಂಬ ಪದವು ಇತ್ತೀಚೆಗೆ ತುಂಬಾ ಸಂಕುಚಿತವಾದ ಅರ್ಥವನ್ನು ಪಡೆದುಕೊಳ್ಳುತ್ತಿದೆ. ಹೇಗೆಂದರೆ ಕಾರ್ಮಿಕ ನಿರ್ವಹಿಸುವ ಎಲ್ಲಾ ಕೆಲಸ ಕಾರ್ಯಗಳನ್ನು ಯಂತ್ರಗಳೇ ನಿರ್ವಹಿಸುತ್ತಿರುವುದರಿಂದ ಕಾರ್ಮಿಕನ ಸ್ಥಾನ-ಮಾನ ಬಹಳಷ್ಟು ಇತಿ-ಮಿತಿಗೊಳಗಾಗಿದೆ. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಅಧಿಕ ಉತ್ಪಾದನೆ, ಅಧಿಕ ಲಾಭ ಮತ್ತು ಬೃಹತ್ ಮಾರುಕಟ್ಟೆ ಎಂಬ ಪ್ರಕ್ರಿಯೆಗಳು ಉತ್ಪಾದನಾ ವಲಯ ಹಾಗೂ ಮಾಲೀಕ ವರ್ಗಗಳಲ್ಲಿ ಪದೇ ಪದೇ ಪರಿಶೀಲನೆಗೊಳ ಪಡುತ್ತಿವೆ. ಜಾಗತೀಕರಣವು ಖಾಸಗೀಕರಣದ ಬಲವರ್ಧನೆಗೆ ಸಹಕರಿಸುತ್ತಿರುವುದರಿಂದ ವಿಶ್ವದ ಬೇರೆ, ಬೇರೆ ದೇಶಗಳಲ್ಲಿರುವ ಬಂಡವಾಳ ಹಾಗೂ ಉನ್ನತ ತಂತ್ರಜ್ಞಾನವು ಅವ್ಯಾಹತವಾಗಿ ಹರಿದುಬರುತ್ತಿದೆ. ದೇಶದಲ್ಲಿರುವ ಎಲ್ಲಾ ಉತ್ಪಾದನಾ ಚಟುವಟಿಕೆಗಳು ಬಂಡವಾಳ ಆಧಾರಿತ ಉತ್ಪಾದನೆಯಾಗಿ ಮಾರ್ಪಡುತ್ತಿರುವುದರಿಂದ ಕಾರ್ಮಿಕರ ಶಕ್ತಿಯು ದಿನೇ, ದಿನೇ ನಿಷ್ಪ್ರಯೋಜಕವಾಗುತ್ತಿದೆ. ಭಾರತ ಬಹಳಷ್ಟು ಅನಕ್ಷರಸ್ಥರನ್ನೊಳಗೊಂಡ ಶ್ರೀಮಂತ ರಾಷ್ಟ್ರ. ಇಂತಹ ಜನರು ಆಧುನೀಕತೆಯಿಂದಾಗುತ್ತಿರುವ ಬದಲಾವಣೆಗಳನ್ನು ಆಸ್ವಾದಿಸುವ ಇಲ್ಲವೇ, ಕರಗತ ಮಾಡಿಕೊಳ್ಳುವ ಚಾತುರ್ಯವನ್ನು ಪಡೆದುಕೊಳ್ಳದ ಕಾರಣ ಅನಕ್ಷರಸ್ಥ ಕಾರ್ಮಿಕನು ಮತ್ತಷ್ಟು ಉಪೇಕ್ಷೆಗೆ ಒಳಗಾಗಬೇಕಾಗಿದೆ. ಜಾಗತೀಕರಣವು ಮಾನವೀಯ ಮೌಲ್ಯಗಳಿಗಿಂತಲೂ, ಬಂಡವಾಳ ಸಂಬಂಧಿ ವಿಷಯಗಳಿಗೆ ಹೆಚ್ಚು ಮಾನ್ಯತೆ ಕೊಟ್ಟಿದ್ದರಿಂದ ಕಾರ್ಮಿಕ ಶಕ್ತಿಯು ಯಕಃಶ್ಚಿತವಾಗಿ ಕಂಡುಬರುತ್ತಿದೆ. ಇಂತಹ ಗುರುತರವಾದ ಸನ್ನಿವೇಶದಲ್ಲಿ ಗಣಿ ಕೈಗಾರಿಕೆಯನ್ನು ಅಥವಾ ಬೇರೆ ಯಾವುದಾದರು ಕೈಗಾರಿಕೆಗಳನ್ನು ಸ್ತಬ್ಧಗೊಳಿಸಿದ್ದಲ್ಲಿ, ಕೇವಲ ತನ್ನ ದೈಹಿಕ ಸ್ವ-ಸಾಮರ್ಥ್ಯದಿಂದ ದುಡಿಮೆಯನ್ನೇ ನಂಬಿಕೊಂಡಿದ್ದ ಬಹಳಷ್ಟು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಕಾರ್ಮಿಕರನ್ನು ಅವಲಂಬಿಸಿದ ಕುಟುಂಬಗಳು ನಿರುದ್ಯೋಗ, ಹಸಿವು, ಅನಾರೋಗ್ಯಗಳಿಂದಾಗಿ ಅನೇಕ ರೋಗ-ರುಜಿನಗಳಿಗೆ ಬಲಿಯಾಗಿ ನಿರ್ನಾಮಗೊಂಡಿವೆ. ನಮ್ಮ ಸುತ್ತಲಿನ ವ್ಯವಸ್ಥೆಯಲ್ಲಿ ಹಸಿವು, ನಿರಾಸೆ, ಹಾಹಾಕಾರ, ಸಿಟ್ಟು-ಆಕ್ರೋಶಗಳು ಜನಸಮುದಾಯಗಳ ಒಡಲೊಳಗೆ ಕುದಿಯುತ್ತಿವೆ. ಇಂತಹ ದ್ವೇಷಮಯ ವಾತಾವರಣವು ಯಾವುದೇ ಸನ್ನಿವೇಶದಲ್ಲೂ, ಅದು ಯಾವುದೇ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹ ವಾತಾವರಣಕ್ಕೆ ಕಾರಣವಾಗುವ ಗಣಿ ಕಾರ್ಮಿಕನ ಸಾಮಾಜಿಕ ಆರ್ಥಿಕ ಪರಿಸ್ಥಿತಿಯು ಪ್ರಸ್ತುತ ಸನ್ನಿವೇಶದಲ್ಲಿ ಅಧ್ಯಯನಕ್ಕೆ ಯೋಗ್ಯವಾಗಿ ಕಂಡುಬಂದಿರುವುದರಿಂದ ಕೋಲಾರ ಜಿಲ್ಲೆ, ಕೋಲಾರ್ ಗೋಲ್ಡ್ ಫೀಲ್ಡ್ (ಕೆ.ಜಿ.ಎಫ್) ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿ.ಜಿ.ಎಮ್.ಎಲ್) ಸಂಸ್ಥೆಯ ಸ್ತಬ್ಧತೆಯಿಂದ ನೌಕರರ ಮೇಲೆ ಬೀರಿರುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಣಾಮಗಳ ಸಂಬಂಧವಾಗಿ ಅಧ್ಯಯನ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿದೆ.
 
ಗಣಿ ಕಾರ್ಮಿಕರ ಸಮಸ್ಯೆಗಳು
ಭಾರತದ ಯವುದೇ ಉತ್ಪಾದನಾ ವಲಯವನ್ನು ತೆಗೆದುಕೊಂಡರೂ ಕಾರ್ಮಿಕ ಸಮುದಾಯಗಳೇ ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲೂ ಅಸಂಘಟಿತ ವಲಯದಲ್ಲಂತೂ ಕೌಶಲ್ಯರಹಿತ ಕಾರ್ಮಿಕರೇ ಅತ್ಯಧಿಕ ಪ್ರಮಾಣದಲ್ಲಿ ಕಾಣಬಹುದು. ಇಂತಹ ಅಸಂಘಟಿತ ಕೌಶಲ್ಯರಹಿತ ಕಾರ್ಮಿಕರು, ಆಯಾ ಉತ್ಪಾದನೆಗೆ ಸಂಬಂಧಿಸಿದ ಯಾವುದೇ ಸ್ವರೂಪದ ಶಿಕ್ಷಣವನ್ನು ಪಡೆಯದೇ ತಮ್ಮ ಸ್ವ-ಸಾಮರ್ಥ್ಯದ ಮೇಲೆ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸದೇ ಕೇವಲ ಆ ದಿನದ ಮಟ್ಟಿಗೆ ಊಟ, ವಸತಿ, ಬಟ್ಟೆಯ ಬಗ್ಗೆ ಮಾತ್ರ ಯೋಚಿಸುವವರು. ಸರ್ಕಾರಗಳು ರೂಪಿಸಿರುವ ಯಾವುದೇ ಕಾಯ್ದೆ-ಕಾನೂನುಗಳ ಬಗ್ಗೆ ತಿಳುವಳಿಕೆ ಇಲ್ಲದೇ, ಅವರ ಹಕ್ಕುಗಳೇನು? ಅವುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿಯದವರಾಗಿದ್ದಾರೆ, ಇದರಿಂದಾಗಿ ಅಸಂಘಟಿತ ಕಾರ್ಮಿಕರು ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಾರೆ.6 ಹೀಗಾಗಿ ಬಂಡವಾಳದಾರರು ಅಥವಾ ಉತ್ಪಾದನೆಯ ಮಾಲೀಕರು ಅಸಂಘಟಿತ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾರೆ. ಅಧ್ಯಯನ ಸಮಯದಲ್ಲಿ ಗಣಿ ಕಾರ್ಮಿಕರ ಸ್ಥಿತಿಗತಿಯ ಅಧ್ಯಯನಕ್ಕಾಗಿ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಂಡೂರು ಗಣಿ ಪ್ರದೇಶಗಳಿಗೆ ಭೇಟಿ ನೀಡಿದಾಗ, ಇಲ್ಲಿನ ಕಾರ್ಮಿಕರ ಜೀವನಕ್ರಮ ನರಕಸದೃಶ. ಆ ಗಣಿ ಪ್ರದೇಶಗಳಲ್ಲಿ ಸುಮಾರು ಐವತ್ತು ಸಾವಿರಕ್ಕಿಂತಲೂ ಹೆಚ್ಚು ಕಾರ್ಮಿಕರು ವಾಸವಾಗಿದ್ದು, ಅವರಲ್ಲಿ ಶೇಕಡ 80 ರಷ್ಟು ಅಸಂಘಟಿತ ವಲಯಕ್ಕೆ ಸೇರ್ಪಡುವ ಕೌಶಲ್ಯರಹಿತ ಗಣಿ ಕಾರ್ಮಿಕರೇ ಆಗಿದ್ದಾರೆ. ಅಲ್ಲಿರುವ ಕಾರ್ಮಿಕರ ವಸತಿ ಸ್ವರೂಪವು ತುಂಬಾ ಕೆಟ್ಟದಾಗಿದ್ದು, ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಭಾರತ ದೇಶದ ಅಭಿವೃದ್ಧಿಗಾಗಿ ತಮ್ಮ ಶ್ರಮ, ಬೆವರು, ರಕ್ತವನ್ನು ಧಾರೆಯೆರೆದ ಕಾರ್ಮಿಕರಿಗೆ ಬಯಲು ಆಲಯದ ಸನ್ಮಾನ ವಿಪರ್ಯಾಸವಲ್ಲವೇ? ಅಲ್ಲದೇ ಕಾರ್ಮಿಕರು ತಮ್ಮ ದಿನನಿತ್ಯದ ಕೂಲಿಗಾಗಿ ಇಲ್ಲವೇ ದುಡಿಮೆಗಾಗಿ ಉದ್ಯೋಗವನ್ನು ಅರಸಿ ನಿರ್ದಿಷ್ಟ ಪ್ರದೇಶವೆಂಬ ಮಾರುಕಟ್ಟೆಯಲ್ಲಿ ಕೊಳ್ಳುವವರಿಗಾಗಿ ಕಾಯುತ್ತಾ ಕಾಲವನ್ನು ನೂಕಬೇಕಾಗಿದೆ.7 ಕೊಳ್ಳುವವರ ಬೇಡಿಕೆಗನುಗುಣವಾಗಿ ಕಾರ್ಮಿಕರ ಆಯಾ ದಿನದ ಕೂಲಿ ನಿರ್ಧಾರವಾಗುತ್ತದೆ. ಹೀಗೆ ಅಸಂಘಟಿತ ಕಾರ್ಮಿಕರು ತಮ್ಮ ದೈನಂದಿನ ಬದುಕಿನಲ್ಲಿ ಶೋಷಣೆ, ಹಲ್ಲೆ, ದೊಂಬಿ ಇತ್ಯಾದಿ ಪ್ರಕರಣಗಳಿಗೆ ನಿರಂತರವಾಗಿ ಬಲಿಯಾಗಬೇಕಾಗುತ್ತದೆ. ಇಂತಹ ಸನ್ನಿವೇಶ ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರ ನೆತ್ತಿಯ ಮೇಲೆ ತೂಗು ಕತ್ತಿಯಂತೆ ಬದುಕಿನ ಎಚ್ಚರಿಕೆಯ ಗಂಟೆಯನ್ನು ಯಾವಾಗಲೂ ನೆನಪಿಸುತ್ತದೆ!
 
ಕೋಲಾರದ ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗಳು
ಭಾರತಕ್ಕೆ ಖ್ಯಾತಿ ತಂದಿರುವ ಹಲವಾರು ಹೆಮ್ಮೆಗಳಲ್ಲಿ ಕರ್ನಾಟಕ ರಾಜ್ಯದ ಕೋಲಾರ ಚಿನ್ನದ ಗಣಿ ಅತ್ಯಂತ ಪ್ರಮುಖವಾದುದು. ಭಾರತದ ಒಟ್ಟಾರೆ ಚಿನ್ನದ ಉತ್ಪಾದನೆಯಲ್ಲಿ ಅತಿ ಹೆಚ್ಚು ಪಾಲು ಉತ್ಪಾದನೆಯಾಗುತ್ತಿದ್ದುದು ಕೋಲಾರದ ಚಿನ್ನದ ಗಣಿಯಿಂದ, ಅಷ್ಟು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಸಹ ಕೋಲಾರದ ಚಿನ್ನದ ಗಣಿ ಅತ್ಯಂತ ಪ್ರಮುಖವಾದುದು. ಕೋಲಾರದ ಚಿನ್ನದ ಗಣಿಗೆ ಇಷ್ಟೆಲ್ಲಾ ಪ್ರಾಮುಖ್ಯತೆ ಇದೆ. ಆದರೂ ಕಳೆದ ಹದಿನಾಲ್ಕು ವರ್ಷಗಳಿಂದ ಅಲ್ಲಿನ ಗಣಿ ಕಾರ್ಮಿಕರ ಬಗ್ಗೆ ಯಾರೂ ಅಧ್ಯಯನ ಮಾಡದಿರುವುದು ಶೋಚನೀಯ ಸಂಗತಿಯಾಗಿದೆ. ಗಣಿ ಸ್ತಬ್ಧಗೊಂಡ ನಂತರ ಇಲ್ಲಿನ ಕಾರ್ಮಿಕರ ಮೇಲೆ ಪರಿಣಾಮ ಬೀರಿದ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ಸರ್ಕಾರ ಚಿಂತನೆ ಮಾಡದಿರುವುದರಿಂದ ಇಲ್ಲಿನ ಕಾರ್ಮಿಕರು ಆತ್ಮಹತ್ಯೆಯ ದಾರಿ ಹಿಡಿದಿರುವುದು ಸಾಮಾಜಿಕ ಸಮಸ್ಯೆಯೇ ಸರಿ. ಕರ್ನಾಟಕದ ಹಾಗೂ ಭಾರತದ ಕೀರ್ತಿಗೆ ನಿಜವಾದ ಕಾರಣಕರ್ತರಾಗಿದ್ದ ಇಲ್ಲಿನ ಗಣಿಕಾರ್ಮಿಕರ ಪರಿಸ್ಥಿತಿ ಅಯೋಮಯವಾಗಿರುವುದು ಮಾತ್ರ ರಾಜ್ಯದ ಜನತೆಯ ಗಮನಕ್ಕೆ ಸಾಕಷ್ಟು ಬಂದಿಲ್ಲವೆಂದೇ ಹೇಳಬಹುದು.

ಕಳೆದ 2000 ಫೆಬ್ರವರಿ ಕೇಂದ್ರ ಸರ್ಕಾರವು ಕೋಲಾರ ಚಿನ್ನದ ಗಣಿಯನ್ನು ಮುಚ್ಚಲಾಗುವುದು ಎಂದು ಘೋಷಿಸಿದ ನಂತರ ಗಣಿ ಉಳಿಸಿಕೊಳ್ಳಲು ಗಣಿ ಕಾರ್ಮಿಕರು ಹಾಗೂ ಕೆ.ಜಿ.ಎಫ್. ಜನತೆ ನಡೆಸಿದ ಹಾಗೂ ನಡೆಸುತ್ತಿರುವ ಹೋರಾಟದಿಂದಾಗಿ ಚಿನ್ನದ ಗಣಿಯ ನಿಜವಾದ ಪರಿಸ್ಥಿತಿ ದೇಶದ ಜನತೆಯ ಅರಿವಿಗೆ ಬರತೊಡಗಿತು. ಗಣಿಗಳಿಂದ ಚಿನ್ನವನ್ನು ಶೋಧಿಸಿ ತೆಗೆಯುತ್ತಿದ್ದ ಗಣಿ ಕಾರ್ಮಿಕರು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಂದ ಬಳಲಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ. ಈ ಗಣಿಯಲ್ಲಿ ಕಳೆದ 120 (1880-2000) ವರ್ಷಗಳಲ್ಲಿ ಆಳುವ ವರ್ಗದ ನಿರ್ಲಕ್ಷ್ಯದಿಂದ ಚಿನ್ನವನ್ನು ಹೊರತೆಗೆಯುತ್ತಾ ಭೂಮಿಯ  ಪಾತಾಳದಲ್ಲಿ ಸಿಲುಕಿ  ಹೊರ ಬರದೇ ಹೋದ ಕಾರ್ಮಿಕ ಜೀವಿಗಳು ಸಾವಿರಾರು, ಚಿನ್ನವನ್ನು ಸಂಸ್ಕರಿಸಲು ಸೈನೈಡ್ ಎಂಬ ಘನ ಘೋರ ವಿಷವನ್ನು ಪ್ರಯೋಗಿಸುತ್ತಾ ಚಿನ್ನಕ್ಕಂಟಿದ ಕಸ ತೆಗೆಯಲು ತಾವು ಬಳಸಿದ ರಾಸಾಯನಿಕಗಳಿಂದ ಅವರು ಸಿಲಿಕಾಸಿಸ್ ಎಂಬ ಘೋರ ಖಾಯಿಲೆಗೆ ಬಲಿಯಾದವರೆಷ್ಟೋ. ಇವರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ವಹಿಸದೆ ಇವರನ್ನು ನಿರ್ಲಕ್ಷಿಸಲಾಗಿದೆ.8 ಕಳೆದ 120 ವರ್ಷಗಳಿಂದ ಆಭರಣ (ಚಿನ್ನ) ಮತ್ತು ಬಂಡವಾಳ ಪ್ರಿಯರ ಜೀವನಗಳಿಗೆ ತಮ್ಮ ಬದುಕನ್ನು ಸವೆಸುತ್ತಾ ಬಂದ ಕಾರ್ಮಿಕರ ಪರಿಸ್ಥಿತಿ ಇಂದು ಮತ್ತಷ್ಟು ಅತಂತ್ರವಾಗಿ ಪ್ರಸ್ತುತ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಳಲಿದ್ದಾರೆ. ಇಲ್ಲಿನ ಕಾರ್ಮಿಕರ ಕ್ರಮವನ್ನು ಅಗ್ಗದ ಬೆಲೆಗೆ ಲೂಟಿ ಮಾಡಿ ಚಿನ್ನವನ್ನು ಹೊರತೆಗೆದ ನಂತರ ಫೆಬ್ರವರಿ 2001 ರಲ್ಲಿ ಕೇಂದ್ರ ಸರ್ಕಾರ ಬಿ.ಜಿ.ಎಂ.ಎಲ್ ಸಂಸ್ಥೆಯನ್ನು ಸ್ತಬ್ಧಗೊಳಿಸಲಾಯಿತು, ಆ ಮೂಲಕ 4306 ಕಾರ್ಮಿಕರನ್ನು ಅವರನ್ನೇ ನಂಬಿರುವ ಕುಟುಂಬಗಳನ್ನು ವ್ಯಾಪಾರಸ್ಥರನ್ನು, ಗಣಿಯನ್ನೇ ಆಧರಿಸಿರುವ ಕೆ.ಜಿ.ಎಫ್ ನಗರವನ್ನು ಬಂಜರು ಮಾಡಿ ಹೊರಟರು.

ವಸಾಹತುಶಾಹಿ ನೆಲೆಯಲ್ಲಿ ಅಂದಿನ ಉತ್ಪಾದನೆ ಹಾಗೂ ವಿತರಣೆಗಳು ನಿರ್ಧರಿಸಲ್ಪಡುವುದರಿಂದ ತಮ್ಮ ಉತ್ಪಾದನಾ ಕಾರ್ಯಚಟುವಟಿಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಉತ್ಪಾದನಾ ಘಟಕದ ಹತ್ತಿರದಲ್ಲಿಯೇ ಕಾರ್ಮಿಕ ಕಾಲೋನಿ ಅಥವಾ ಕ್ವಾರ್ಟಸ್ ಮಾದರಿಯಲ್ಲಿ ತಾತ್ಕಾಲಿಕ ಹಾಗೂ ಅವೈಜ್ಞಾನಿಕ ವಸತಿ ವ್ಯವಸ್ಥೆಯನ್ನು ಕಾರ್ಮಿಕರಿಗೆ ನಿರ್ಮಿಸಿದ್ದಾರೆ. ತಮ್ಮ ಸ್ವಂತದ್ದಾಗಿರದ ಮತ್ತು ಬೇರೆಕಡೆಯಲ್ಲಿಯು ಸ್ಥಿರವಾಗಿ ನೆಲೆನಿಲ್ಲದ ಬಿ.ಜಿ.ಎಂ.ಎಲ್ ಗಣಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಹಾಗಾಗಿ ಕೆಲಸವಿಲ್ಲದೆ, ಸರ್ಕಾರದಿಂದ ಯಾವುದೇ ಪರಿಹಾರ ಸೌಲಭ್ಯಗಳಿಲ್ಲದೆ ಅವರ ಕುಟುಂಬದ ಸ್ವರೂಪ, ಶಿಕ್ಷಣ ಆದಾಯ, ಜೀವನಮಟ್ಟವನ್ನು ಅವಲೋಕಿಸುವುದರಿಂದ ಸಾಮಾಜಿಕವಾಗಿ ಯಾನ ಸ್ಥಾನಮಾನಗಳನ್ನು ಬಿ.ಜಿ.ಎಂ.ಎಲ್ನ ನಿವೃತ್ತ ಗಣಿ ಕಾರ್ಮಿಕರಿಗೆ ಲಭ್ಯವಾಗಿವೆ ಎಂಬುದನ್ನು ಕುರಿತು ಅಧ್ಯಯನ ನಡೆಯಬೇಕಾಗಿದೆ.9
 
ಸಂಶೋಧನಾ ವಿಧಾನ
ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ
ಕೆ.ಜಿ.ಎಫ್ ನಗರದಲ್ಲಿ ಬಿ.ಜಿ.ಎಮ್.ಎಲ್. ಕಾರ್ಖಾನೆಯಿದೆ. ಈ ನಗರದಲ್ಲಿ ಐದು ಗಣಿಗಳಿದ್ದು ಮುಚ್ಚುವಾಗ 4306 ಕಾರ್ಮಿಕರಿದ್ದು ಇದರಲ್ಲಿ ಹಲವಾರು ವಲಸೆ ಹೋಗಿದ್ದು ಕೆಲವರು ಇದೇ ಕೆ.ಜಿ.ಎಫ್. ನಗರದಲ್ಲಿರುವ ಮಾರಿಕುಪ್ಪಂ ಮೈನ್ಸ್, ಉರಿಗಾಂ ಮೈನ್ಸ್, ನಂದಿ ದುರ್ಗಂ ಮೈನ್ಸ್, ಪಾಲಕ್ಕಾಡು ಮೈನ್ಸ್, ಚಾಂಪಿಯನ್ ರೀಪ್ ಮೈನ್ಸ್ಗಳಲ್ಲಿ ವಾಸವಾಗಿದ್ದಾರೆ. ಪರಿಪೂರ್ಣವಾದ ಪುನರ್ ವ್ಯವಸ್ಥೆಯನ್ನು ರೂಪಿಸದೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಮುಚ್ಚುವುದರಿಂದಾಗಿ ಕಾರ್ಮಿಕರು ಮತ್ತು ಅವರ ಅವಲಂಬಿತರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲುಂಟಾಗಬಹುದಾದ ಪರಿಣಾಮಗಳು ಕಲ್ಪನಾತೀತವಾದವುಗಳಾಗಿರುತ್ತವೆ. ಹಾಗಾಗಿ ಈ ಎಲ್ಲವುಗಳನ್ನು ಸಂಬಂಧಿಸಿದ ಸಂಶೋಧನೆಯು ಬಹು ಮುಖ್ಯವಾದ ವ್ಯಾಪ್ತಿಯನ್ನು ಹೊಂದಿದ್ದು ಈ ಅಧ್ಯಯನವನ್ನು ಕೈಗೊಳ್ಳಲಾಗಿದೆ.
 
ಅಧ್ಯಯನದ ಉದ್ದೇಶಗಳು
- ಬಿ.ಜಿ.ಎಮ್.ಎಲ್. ಗಣಿ ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯುವುದು.
- ಉದ್ಯೋಗ ವಂಚಿತ ಗಣಿ ಕಾರ್ಮಿಕರಿಗೆ ನೀಡಲಾಗಿರುವ ಶಾಸನಬದ್ಧ ಹಾಗೂ ಶಾಸನೇತರ ಪರಿಹಾರೋಪಾಯಗಳ ಸ್ವರೂಪವನ್ನು ತಿಳಿಯುವುದು.
- ಉದ್ಯೋಗವಂಚಿತ ಕಾರ್ಮಿಕರು ಮತ್ತು ಅವಲಂಬಿತರ ಪುನರ್ವಸತಿಗಾಗಿ ಸರ್ಕಾರ ಹಾಗೂ ನಾಗರೀಕ ಸಮಾಜವು ರೂಪಿಸಿ ಅನುಷ್ಠಾನಗೊಳಿಸಿರುವ  ಪ್ರಯತ್ನಗಳನ್ನು ಪರಾಮರ್ಶಿಸುವುದು.
 
ಸಂಶೋಧನಾ ವಿನ್ಯಾಸ ಮತ್ತು ನಮೂನೆಯ ಆಯ್ಕೆ
ಪ್ರಸಕ್ತ ಸಂಶೋಧನೆಯು ವಿವರಣಾತ್ಮಕ ಸಂಶೋಧನಾ ಮಾದರಿಯನ್ನು ಅಳವಡಿಸಿಕೊಂಡಿದ್ದು ಕೋಲಾರ ಚಿನ್ನದ ಗಣಿಯನ್ನು ಮುಚ್ಚಿರುವ ಕಾರಣದಿಂದ ನಿರುದ್ಯೋಗಿಗಳಾಗಿರುವ ನಿವೃತ್ತ ಕಾರ್ಮಿಕರನ್ನು ಪ್ರಸ್ತುತ ಸಂಶೋಧನೆಗಾಗಿ ಅಗತ್ಯವಿರುವ ಮಾಹಿತಿ ಸಂಗ್ರಹಣೆಗಾಗಿ ಬಿ.ಜಿ.ಎಮ್.ಎಲ್. ನ ಗಣಿ ಪ್ರದೇಶದಲ್ಲಿರುವ ಐದು ಗಣಿ ವಸತಿ ಪ್ರದೇಶಗಳಾದ ಮಾರಿಕುಪ್ಪಂ ಮೈನ್ಸ್, ಉರಿಗಾಂ ಮೈನ್ಸ್, ಮೈಸೂರು ಮೈನ್ಸ್, ಕೋರಮಂಡಲ್ ಮೈನ್ಸ್, ಚಾಂಪಿಯನ್ ರೀಪ್ ಮೈನ್ಸ್ಗಳಲ್ಲಿ ವಾಸವಾಗಿದ್ದ ಗಣಿ ಕಾರ್ಮಿಕರನ್ನು ಸಂಶೋಧಕನು ಪ್ರಾಥಮಿಕ ಮಾಹಿತಿಗಾಗಿ ಪೂರ್ವಭಾವ ಭೇಟಿ  ಅಧ್ಯಯನವನ್ನು ಕೈಗೊಂಡ, ಪ್ರತಿ ಐದು ಗಣಿ ವಸತಿ ಪ್ರದೇಶಗಳಿಂದ ತಲಾ ಹತ್ತು ಪ್ರತಿವರ್ತಿಗಳನ್ನಾಗಿ ಆಯ್ಕೆ ಮಾಡಿಕೊಂಡು ಒಟ್ಟು ಐವತ್ತು ಪ್ರತಿವರ್ತಿಗಳನ್ನು  ಪೂರ್ವಭಾವ ಭೇಟಿ ಅಧ್ಯಯನಕ್ಕೆ ಅಳವಡಿಸಿಕೊಂಡು, ಈ ಅಧ್ಯಯನವನ್ನೇ ವಿಶ್ಲೇಷಿಸಿ ಫಲಿತಾಂಶಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.
  • ಪ್ರತಿವರ್ತಿಗಳ ವಯಸ್ಸು 55 ರಿಂದ 70 ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
  • ಅಧ್ಯಯನದಲ್ಲಿ ಎಲ್ಲಾ ಗಣಿ ಕಾರ್ಮಿಕರು (ಶೇಕಡ 100) ವಿವಾಹಿತರು ಎಂದು ತಿಳಿದುಬಂದಿದೆ.
  • ಬಹಳಷ್ಟು ಗಣಿ ಕಾರ್ಮಿಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
  • ಶೇಕಡ 60 ರಷ್ಟು ಪ್ರತಿವರ್ತಿಗಳು ಮೂಲತಃ ತಮಿಳುನಾಡು ರಾಜ್ಯದಿಂದ ಬಂದವರೆಂದು ಅಧ್ಯಯನದಲ್ಲಿ ತಿಳಿದುಬಂದಿದೆ.
  • ಅಧ್ಯಯನದಲ್ಲಿ ಶೇಕಡ 56 ರಷ್ಟು ಕಾರ್ಮಿಕರು ವಿಭಕ್ತ ಕುಟುಂಬದವರಾಗಿದ್ದಾರೆ.
  • ಬಹಳಷ್ಟು ಗಣಿ ಕಾರ್ಮಿಕರು ಊಟ ಮತ್ತು ಬಟ್ಟೆಗೆ ಹೆಚ್ಚಾಗಿ ಖರ್ಚು ಮಾಡುತ್ತಾರೆಂಬುದು ಅಧ್ಯಯನದಲ್ಲಿ ಕಂಡುಬಂದಿದೆ.
  • ಹೆಚ್ಚಿಗೆ (ಶೇಕಡ 50 ರಷ್ಟು) ಪ್ರತಿವರ್ತಿಗಳು ದಿನಾಲು ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಾರೆ.
  • ಶೇಕಡ 63 ರಷ್ಟು ಪ್ರತಿವರ್ತಿಗಳು ಬಡ್ಡಿಗಾಗಿ ಸಾಲಗಾರರ ಹತ್ತಿರ ಅಥವಾ ಒಪ್ಪಂದಗಾರರ ಹತ್ತಿರ ಸಾಲವನ್ನು ಪಡೆದಿರುವವರಾಗಿದ್ದಾರೆ.
  • ಅತಿ ಹೆಚ್ಚು (ಶೇಕಡ 85 ರಷ್ಟು) ಗಣಿ ಕಾರ್ಮಿಕರು ವೃಧ್ಯಾಪ್ಯ ವೇತನದ ಬಗ್ಗೆ ಅರಿವುಳ್ಳವರಾಗಿದ್ದಾರೆ.
  • ಅಧ್ಯಯನದಲ್ಲಿ ಶೇಕಡ 30 ರಷ್ಟು ಪ್ರತಿವರ್ತಿಗಳು ಮೂಳೆ ಸಂಬಂಧಿತ (ಬೆನ್ನು ನೋವು, ಮೊಣಕಾಲು ನೋವು, ಕುತ್ತಿಗೆ ನೋವು ಇತ್ಯಾದಿ) ಖಾಯಿಲೆಗಳಿಂದ ಬಳಲುತ್ತಿದ್ದಾರೆ.
  • ಶೇಕಡ 86 ರಷ್ಟು ಗಣಿ ಕಾರ್ಮಿಕರಿಗೆ ಸ್ವಂತ ಮನೆಯಿಲ್ಲ.
  • ಶೇಕಡ 60 ರಷ್ಟು ಗಣಿ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ವರೆಗಷ್ಟೆ ಓದಿಕೊಂಡಿದ್ದಾರೆ.
  • ಅಧ್ಯಯನದಲ್ಲಿ ಕಂಡುಬಂದಂತೆ ಶೇಕಡ 85 ರಷ್ಟು ಪ್ರತಿವರ್ತಿಗಳು ಮುಂದಿನ ಕುಟುಂಬದ ಭವಿಷ್ಯಕ್ಕಾಗಿ ಯಾರು ಜೀವ ವಿಮೆ ಮಾಡಿಸಿಲ್ಲ.
  • ಶೇಕಡ 39 ರಷ್ಟು ಪ್ರತಿವರ್ತಿಗಳು ಕುಡಿತದ ಅಭ್ಯಾಸವನ್ನು ಉಳ್ಳವರಾಗಿದ್ದಾರೆ.
  • ಅಧ್ಯಯನದಲ್ಲಿ ಶೇಕಡ 60 ರಷ್ಟು ಪ್ರತಿವರ್ತಿಗಳು ಗಣಿ ಪುನರ್ ಆರಂಭವಾಗುವುದಿಲ್ಲವೆಂದು ತಿಳಿಸಿದ್ದಾರೆ.
  • ಶೇಕಡ 40 ರಷ್ಟು ಗಣಿ ಕಾರ್ಮಿಕರ ಗಣಿ ಪುನರ್ ಆರಂಭವಾಗುವುದರಲ್ಲಿ ರಾಜಕೀಯ ನಾಯಕರ ಹಿತಾಸಕ್ತಿ ಇಲ್ಲದಿರುವುದೇ ಕಾರಣವೆಂದು ಬೇಸರ ವ್ಯಕ್ತಪಡಿಸಿದ್ದಾರೆ. 
Picture
Picture
Picture
Picture
Picture
ಉಪಸಂಹಾರ
ಗಣಿ ಕೈಗಾರಿಕೆಗಳು ಸ್ತಬ್ಧಗೊಂಡ ಅಥವಾ ಮುಚ್ಚಿದ ನಂತರ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪರಿಸ್ಥಿತಿಯು ತುಂಬಾ ಅಸ್ತವ್ಯಸ್ತ ಹಾಗೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಏಕೆಂದರೆ ಅಸಂಘಟಿತ ಕಾರ್ಮಿಕರಿಗೆ ವರ್ಷಕ್ಕೆ ಆರರಿಂದ ಎಂಟು ತಿಂಗಳವರೆಗೆ ದುಡಿಮೆ ಸಿಕ್ಕರೂ ಸಹ ಅವರ ಪರಿಸ್ಥಿತಿ ಕೆಲಸ ವಂಚಿತ ಕಾರ್ಮಿಕರಿಗಿಂತ ಉತ್ತಮವೆಂದೇ ಹೇಳಬಹುದು. ಅಷ್ಟೇ ಅಲ್ಲದೆ ಅಸಂಘಟಿತ ಕಾರ್ಮಿಕರಿಗಾಗಿ ಇತ್ತೀಚೆಗೆ ಸಾಮಾಜಿಕ ಭದ್ರತೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಕಾಯಿದೆ-ಕಾನೂನುಗಳನ್ನು ಸರ್ಕಾರಗಳು ಅನುಷ್ಠಾನಗೊಳಿಸಿವೆ ಮತ್ತು ಇವರಿಗಾಗಿ ಹಲವಾರು ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಕಾರ್ಮಿಕ ಒಕ್ಕೂಟಗಳು ಸಹ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅವರು ಸಮಾಜದಲ್ಲಿ ತಮ್ಮದೇ ಆದ ಒಂದು ಅಸ್ಮಿತೆಯ (Identity) ಅನನ್ಯತೆಯನ್ನು ಪಡೆದವರಾಗಿದ್ದಾರೆ. ಇನ್ನೂ ಬೇರೆ ಕಾರ್ಖಾನೆಗಳಲ್ಲಿ ಪ್ರಸ್ತುತ ದುಡಿಯುತ್ತಿರುವ ಕಾರ್ಮಿಕರು ಸಂಘಟಿತಗೊಂಡಿರುವುದರಿಂದ ತಮ್ಮ ಹಕ್ಕುಗಳ ಬಗ್ಗೆ ಅರಿವುಳ್ಳವರು, ಬಲವುಳ್ಳವರು, ಪರಿಜ್ಞಾನವುಳ್ಳವರೂ ಆಗಿದ್ದಾರೆ. ಅಲ್ಲದೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಘಟಿತಗೊಂಡಿರುವುದರಿಂದ ಬಂಡವಾಳಗಾರರು, ಮಾಲೀಕರು ಇವರನ್ನು ಸುಲಭವಾಗಿ ಪರಿಗಣಿಸಿಲ್ಲ. ಹೀಗಾಗಿ ಅವರಿಗೆ ದುಡಿಮೆಗೆ ತಕ್ಕ ಕೂಲಿಯು ದೊರೆಯುತ್ತದೆ. ಹಾಗಾಗಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಂಘಟಿತಗೊಡಿರುವುದರಿಂದ ಅವರ ಜೀವನ ಉತ್ತಮವಾಗಿದೆ. ಆದರೆ ಕೈಗಾರಿಕೆಗಳು ಸ್ತಬ್ಧಗೊಂಡ ಅಥವಾ ಮುಚ್ಚಿದ ನಂತರ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪರಿಸ್ಥಿತಿಯೇ ಬೇರೆ, ಅವರ ಬದುಕಂತೂ ಅಯೋಮಯ. ಅವರಿಗೆ ತಮ್ಮದೆಂಬ ಯಾವುದೇ ಕಾಯಿದೆ-ಕಾನೂನುಗಳಿಲ್ಲ. ಏಕೆಂದರೆ ನಮ್ಮ ಘನ ಸರ್ಕಾರಗಳು ಜಾರಿಗೊಳಿಸಿರುವ ಕಾನೂನುಗಳು ಪ್ರಸ್ತುತ ಕಾರ್ಖಾನೆಗಳಲ್ಲಿ ದುಡಿಯುತ್ತಿರುವವರಿಗಾಗಿವೆ. ಅವು ಸಹ ಅವೈಜ್ಞಾನಿಕ ನೀತಿ ನಿಯಮಗಳಿಂದ ಕೂಡಿದ್ದು, ಕೈಗಾರಿಕೆಗಳು ಸ್ತಬ್ಧಗೊಂಡ ಅಥವಾ ಮುಚ್ಚಿದ ನಂತರ ಅಲ್ಲಿಂದ ಹೊರಬೀಳುವ ಕಾರ್ಮಿಕರಿಗಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಯಾವುದೇ ಸಾಮಾಜಿಕ ಭದ್ರತೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಕಾಯಿದೆ-ಕಾನೂನುಗಳನ್ನು ಸರ್ಕಾರಗಳು ಜಾರಿಗೊಳಿಸಿಲ್ಲ. ಹಾಗಾಗಿ ಅವರು ತಮ್ಮ ಮೂಲ ನೆಲೆ ಹಾಗೂ ಮೂಲವೃತ್ತಿಯಿಂದ ಸ್ಥಳಾಂತರಗೊಂಡು, ತಮ್ಮ ದಿನನಿತ್ಯದ ಹೊಟ್ಟೆಪಾಡಿಗಾಗಿ, ದೈನಂದಿನ ಜೀವನದ ಬದುಕಿಗಾಗಿ ಮತ್ತು ಅವರ ಅವಲಂಬಿತರ ಪೋಷಣೆಗಾಗಿ ಪರ್ಯಾಯ ವೃತ್ತಿಯನ್ನು  ಹುಡುಕಿಕೊಳ್ಳುವ ಮತ್ತು ಸುಶಿಕ್ಷಿತ ಮಾನವ ಸಮಾಜದಲ್ಲಿ ನಿರ್ದಿಷ್ಟವಾದ ಸ್ಥಾನವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಇವರ ಪರವಾಗಿ ಯಾವುದೇ ಕಾನೂನುಗಳು, ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಕಾರ್ಮಿಕ ಒಕ್ಕೂಟಗಳು ಇಲ್ಲದಿರುವುದರಿಂದ, ಸಮಾಜದಲ್ಲಿ ಯಾವುದೇ ರೀತಿಯ ಅಸ್ಮಿತೆಯ (Identity) ಅಥವಾ ಅನನ್ಯತೆ ಇಲ್ಲದಾಗಿದೆ, ಆಧುನಿಕ ಸಮಾಜದಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಹಾಗಾಗಿ ಇವರಿಗಾಗಿ ದುಡಿಯುವ ಕಾರ್ಮಿಕ ಒಕ್ಕೂಟಗಳು ಸಂಘಟಿತವಾಗಬೇಕಿದೆ ಮತ್ತು ಗಣಿ ಕಾರ್ಮಿಕರಿಗಾಗಿಯೆ ಪ್ರತ್ಯೇಕ ಆಸ್ಪತ್ರೆ, ಗಣಿ ಕಾರ್ಮಿಕ ಆಯೋಗವನ್ನು ರಚಿಸಿ, ಗಣಿ ಕಾರ್ಮಿಕರನ್ನು ಅಭಿವೃದ್ಧಿಪಡಿಸಬೇಕಾಗಿದೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಣಿ ಕಾರ್ಮಿಕರ ಶ್ರೇಯೋಭಿಲಾಷೆಗೆ ಜವಾಬ್ದಾರಿ ವಹಿಸಬೇಕಾಗಿದೆ.
 
ಗ್ರಂಥಋಣ
  1. ಗಣಿಗಳ ಕಾಯ್ದೆ-1957, ಪರಿಚ್ಛೇದ 2 (1) (ಜೆ).
  2. ಕಾರ್ಖಾನೆಗಳ ಕಾಯಿದೆ-1948, ಅನುಚ್ಛೇದ 2 (ಐ).
  3. ಶೇಷಾದ್ರಿ ಬಿ. (1998). ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಮತ್ತು ಜನಾಂದೋಲನಾ, ಹಂಪಿ: ಕನ್ನಡ ವಿಶ್ವವಿದ್ಯಾಲಯ, ಪುಟ-20.
  4. ಮೇಧಾ ವೆಂಕಟಯ್ಯ. (2000). ಅವರು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಬಳ್ಳಾರಿ ಜಿಲ್ಲೆಯ  ಹೊಸಪೇಟೆಯ ಗಣಿಗಾರಿಕೆಲ್ಲಿ ಯಾಂತ್ರೀಕರಣದ ಪ್ರಯೋಗ ಎಂಬ ಶೀರ್ಷಿಕೆ ಮೇಲೆ ಪ್ರಬಂಧ ಮಂಡನೆ.
  5. ಶಿವಲಿಂಗಮ್.ಎಸ್. (2001). ಕುದಿಯುತ್ತಿರುವ ಕೋಲಾರದ ಚಿನ್ನದ ಗಣಿ, ಕರ್ನಾಟಕ ವಿಮೋಚನಾರಂಗ, ಬೆಂಗಳೂರು, ಪುಟ 5-6
  6. ಮೂರನೇ ಅಂತರಾಷ್ರ್ಟೀಯ ಮಹಿಳಾ ಮತ್ತು ಗಣಿಗಳ ಸಮ್ಮೇಳನ, 1 ರಿಂದ 9 ಅಕ್ಟೋಬರ್, 2004 ವಿಶಾಖಪಟ್ಟಣ, ಆಂಧ್ರಪ್ರದೇಶ.
  7. ಡಾ.ಎಂ.ವೆಂಕಟಸ್ವಾಮಿ., (2010). ಕೋಲಾರದ ಚಿನ್ನದ ಗಣಿಗಳು, ಸಾಹಿತ್ಯ ಸುಗ್ಗಿ ಪ್ರಕಾಶನ, ಬೆಂಗಳೂರು. ಪುಟ, 269-270.
  8. ಧಾತ್ರಿ ಸಂಪನ್ಮೂಲ ಕೇಂದ್ರ ಮತ್ತು ಸಮತಾ (2010). ಭಾರತದ ಗಣಿಗಳಲ್ಲಿ ಮಹಿಳಾ ಕಾರ್ಮಿಕರು: ಗಣಿ ಕಾರ್ಮಿಕರ ಹಕ್ಕುಗಳ ಸಂರಕ್ಷಕರ ಕೈಪಿಡಿ, ಮಹಿಳೆಯರು ಮತ್ತು ಮಕ್ಕಳಿಗಾಗಿ ಧಾತ್ರಿ ಸಂಪನ್ಮೂಲ ಕೇಂದ್ರ ಸಿಕಿಂದ್ರಬಾದ್ ಮತ್ತು ಸಮತಾ ವಿಶಾಖಪಟ್ನಂ, ಆಂಧ್ರಪ್ರದೇಶ್, ಪುಟ 1.
  9. ಲಕ್ಷ್ಮಯ್ಯ ವಿ. (2011) ಬಂಗಾರಪೇಟೆಯ ಬಂಗಾರದ ದರ್ಶನ. ಗೌತಮ್ ಪ್ರಕಾಶನ, ಬಂಗಾರಪೇಟೆ, ಕೋಲಾರ. ಪುಟ, 108-109.
 
ನಾಗೇಶ ಹೆಚ್.ವಿ.
ಸಂಶೋಧನಾ ವಿಧ್ಯಾರ್ಥಿ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು-560056.
 
ಡಾ. ಕೋದಂಡರಾಮ
ಸಂಶೋಧನಾ ಮಾರ್ಗದರ್ಶಕರು ಹಾಗೂ ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು-560056.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)